ಪೊಲೀಸ್ ನೂತನ ವಾಹನಕ್ಕೆ ಸಂಸದ ರಾಜಶೇಖರ್ ಹಿಟ್ನಾಳ್ ಚಾಲನೆ

ರಣಬೇಟೆ ನ್ಯೂಸ್

ಕೊಪ್ಪಳ.ಸೆ.04: ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರ ಅನುದಾನದಲ್ಲಿ ಪೊಲೀಸ್ ಇಲಾಖೆಗೆ ನೀಡಿದ ವಾಹನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಆವರಣದಲ್ಲಿ ಸೋಮವಾರದಂದು ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಅವರು ಪೊಲೀಸ್ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.


ಬಸ್‌ಗೆ ಚಾಲನೆ ನೀಡಿದ ಬಳಿಕ ಸಂಸದರು ಸ್ವತಃ ತಾವೇ ಬಸ್ ಚಲಾಯಿಸಿ, ಬಸ್ಸಿನ ಸೌಕರ್ಯದ ಕುರಿತು ಪರಿಶೀಲನೆ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್.ಎಲ್. ಅರಸಿದ್ದಿ ಅವರು ಮಾತನಾಡಿ, ಬಸಾಪೂರ ಗ್ರಾಮದ ಹತ್ತಿರ ಇರುವ ಹೊಸ ಜಿಲ್ಲಾ ಪೊಲೀಸ್ ಕ್ವಾಟ್ರಸ್‌ದಿಂದ ಪೊಲೀಸ್ ನೌಕರರ ಮಕ್ಕಳು ಶಾಲೆಗಾಗಿ ಕೊಪ್ಪಳಕ್ಕೆ ಬರಬೇಕಿದ್ದು, ಅಲ್ಲಿ ವಾಹನದ ಸೌಲಭ್ಯದ ಕೊರತೆ ಇರುವ ಕಾರಣ ನಮ್ಮ ನೌಕರರು ಈ ಕ್ವಾಟ್ರಸ್‌ನಲ್ಲಿ ವಾಸಿಸಲು ಹಿಂದೇಟು ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಂಸದರಿಗೆ ಪೊಲೀಸರು ಮನವಿ ಸಲ್ಲಿಸಿದ್ದರು. ಸಂಸದರು ತಮ್ಮ ಎಂಪಿ ನಿಧಿಯಿಂದ 24 ಲಕ್ಷ ವೆಚ್ಚದಲ್ಲಿ ಸಿಸಿ ಕ್ಯಾಮರಾ, ಮೈಕ್ ಸಿಸ್ಟ್ಂ ಒಳಗೊಂಡಂತೆ ಇತರೆ ಮೂಲ ಸೌಕರ್ಯಗಳ ಜೊತೆಗೆ ಪೊಲೀಸ್ ಇಲಾಖೆಗೆ ಒಂದು ಸುಸಜ್ಜಿತ ಬಸ್ ಒದಗಿಸಿದ್ದಾರೆ. ಇದರಿಂದ ಪೊಲೀಸ್ ನೌಕರರ ಮಕ್ಕಳ ಶಿಕ್ಷಣಕ್ಕೆ ತುಂಬಾ ಅನುಕೂಲವಾಗಿದೆ. ಸಂಸದರಿಗೆ ಪೊಲೀಸ್ ಇಲಾಖೆಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತ್ ಕುಮಾರ್, ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ ಸೇರಿದಂತೆ ಪೊಲೀಸ್ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಂಬಂದಿ ಉಪಸ್ಥಿತರಿದ್ದರು.

error: Content is protected !!
Scroll to Top