ಕೈಕೊಟ್ಟ ಖಾಸಗಿ ಕಂಪನಿಗಳು; ಅತಂತ್ರ ಸ್ಥಿತಿಯಲ್ಲಿ ರೈತ!

ಬೆಳೆದಷ್ಟು ಹತ್ತಿ ಬೀಜ ಖರೀದಿಗೆ ಖಾಸಗಿ ಕಂಪನಿಗಳ ನಿರಾಕರಣೆ: ಹತಾಶರಾಗಿ ಹತ್ತಿ ಬೆಳೆ ನಾಶಪಡಿಸುತ್ತಿರುವ ರೈತರು.

ರಣಬೇಟೆ ನ್ಯೂಸ್‌ ಕೊಪ್ಪಳ.

ರೈತರನ್ನು ಪುಸಲಾಯಿಸಿ ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿಸಿದ್ದ ವಿವಿಧ ಖಾಸಗಿ ಬೀಜದ ಕಂಪನಿಗಳು ಈಗ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ರೈತರನ್ನು ನಡುನೀರಿನಲ್ಲಿ ಕೈಬಿಟ್ಟಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ಅತ್ಯಂತ ಹತ್ತಿ ಬೀಜ ಉತ್ಪಾದನೆ ಬೆಳೆ ಬೆಳೆದ ರೈತರು ಸದ್ಯ ಅಕ್ಷರಶಃ ಕಂಗಾಲಾಗಿದ್ದಾರೆ.ಕಡಿಮೆ ಪ್ರದೇಶದಲ್ಲಿ ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿದರೆ ಒಂದಷ್ಟು ಹಣ ಕೈಸೇರಿ ಕುಟುಂಬಗಳ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದು ನಂಬಿದ ರೈತರು ಬೀಜೋತ್ಪಾದನೆಯಲ್ಲಿ ತೊಡಗಿದ್ದಾರೆ. ಆದರೆ ಎರಡು ಕ್ವಿಂಟಲ್‌ಗಿಂತ ಹೆಚ್ಚಿನ ಬೀಜ ಖರೀದಿಸುವುದಿಲ್ಲ ಎಂದು ಕಂಪೆನಿಗಳು ಕೈಚೆಲ್ಲಿದ್ದರಿಂದ ಅನೇಕ ರೈತರು ಬೆಳೆದು ನಿಂತ ಹತ್ತಿ ಗಿಡಗಳನ್ನೇ ಕಿತ್ತು ಹಾಕಿ ಆರ್ಥಿಕವಾಗಿ ಕೈಸುಟ್ಟುಕೊಂಡಿದ್ದಾರೆ.
ಇನ್ನೂ ಬಹಳಷ್ಟು ರೈತರು ಬೀಜೋತ್ಪಾದನೆಯಲ್ಲಿ ಮುಂದುವರಿಯಬೇಕೆ, ಗಿಡಗಳನ್ನು ಕಿತ್ತುಹಾಕಬೇಕೇ ಎಂಬ ವಿಷಯದಲ್ಲಿ ಅತಂತ್ರರಾಗಿರುವುದು ಕಂಡುಬಂದಿದೆ.


ಆಂಧ್ರ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಸೇರಿದ ಬಹಳಷ್ಟು ಖಾಸಗಿ ಬೀಜದ ಕಂಪನಿಗಳ ಮಾತಿಗೆ ಪ್ರತಿವರ್ಷ ಈ ಭಾಗದಲ್ಲಿ ಹತ್ತಿ ಬೀಜೋತ್ಪಾದನೆ ಮಾಡುತ್ತ ಬಂದಿದ್ದಾರೆ. ಉತ್ತಮ ರೀತಿಯಲ್ಲಿ ಬೀಜಗಳನ್ನು ಉತ್ಪಾದಿಸಿದ ರೈತರಿಗೆ ಉತ್ತಮ ಆದಾಯವೂ ಬಂದಿರುವುದು ಹೊಸದಾಗಿ ಬೀಜೋತ್ಪಾದನೆಯಲ್ಲಿ ತೊಡಗುವುದಕ್ಕೆ ಪ್ರೇರಣೆಯಾಗಿದೆ. ಆರಂಭದಲ್ಲಿ ಮೂಲ ಬೀಜ, ಗೊಬ್ಬರ, ಕ್ರಿಮಿನಾಶಕ ಪರಿಕರಗಳನ್ನು ನೀಡಿರುವ ಕಂಪನಿಗಳು ಉತ್ಪಾದನೆಗೊಳ್ಳುವ ಬೀಜದ ಮೊತ್ತದಲ್ಲಿ ನಂತರ ಬಡ್ಡಿ ಸಮೇತ ಹಣ ಕಡಿತ ಮಾಡಿಕೊಳ್ಳುತ್ತವೆ.

ಸಂಪರ್ಕಕ್ಕೆ ಸಿಗದ ಕಂಪನಿಗಳು.
ಆರಂಭದಲ್ಲಿ ರೈತರನ್ನು ಬೀಜೋತ್ಪಾದನೆಗೆ ಪ್ರೇರೇಪಿಸುವ ಖಾಸಗಿ ಕಂಪನಿಯವರು ಈಗ ಇಲ್ಲದ ನೆಪ ಹೇಳುತ್ತಿದ್ದಾರೆ ಯಾವ ಖಾಸಗಿ ಕಂಪನಿಗಳ ಅಧಿಕಾರಿಗಳೂ ರೈತರ ಸಂಪರ್ಕಕ್ಕೆ ಬರುವುದಿಲ್ಲ. ಇಡೀ ವ್ಯವಹಾರ ಕೇವಲ ಮಧ್ಯವರ್ತಿಗಳು ಸ್ಥಳೀಯ ಕಮೀಶನ್ ಏಜೆಂಟರಿಂದಲೇ ನಡೆಯುತ್ತದೆ. ಸಮಸ್ಯೆ ಎದುರಾದರೆ ಮಧ್ಯವರ್ತಿಗಳೂ ಕೈಕೊಡುತ್ತಾರೆ ಎಂದು ರೈತರು ದೂರಿದ್ದಾರೆ. ಯಾವುದೇ ಕಂಪನಿಗಳು ರೈತರೊಂದಿಗೆ ಕಾನೂನಾತ್ಮಕವಾಗಿ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಕಂಪನಿಗಳು ಕೈಕೊಟ್ಟರೆ ರೈತರು ಹಳ್ಳಕ್ಕೆ ಬಿಳುತ್ತಾರೆ. ಕಾನೂನಿನ ಮೂಲಕವಾದರೂ ಸರಿಪಡಿಸಿಕೊಳ್ಳವುದು ಸಾಧ್ಯವೇ ಇಲ್ಲ. ಕಂಪನಿಗಳ ಮೇಲೆ ಕೃಷಿ ಇಲಾಖೆಯ ಹಿಡಿತವೂ ಇಲ್ಲದ ಕಾರಣ ಜಿಲ್ಲೆಯಲ್ಲಿ ಎಷ್ಟು ಪ್ರದೇಶದಲ್ಲಿ ಯಾವ ಯಾವ ಕಂಪನಿಗಳು ಬೀಜೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿವೆ ಎಂಬ ಮಾಹಿತಿಯೂ ತಿಳಿಯುವುದಿಲ್ಲ ಎಂದು ಮೂಲಗಳು ತಿಳಿಸಿವೆ

error: Content is protected !!
Scroll to Top